Monday, August 13, 2012

ಜಸ್ಟ್ 5 ಸೆಕೆಂಡ್ಸ್: ಬಿ ಕೂಲ್ ಮ್ಯಾನ್!

 
ಜಸ್ಟ್ 5 ಸೆಕೆಂಡ್ಸ್: ಬಿ ಕೂಲ್ ಮ್ಯಾನ್!
 

                                                                    ಎ. ಕಷ್ಣ ಭಟ್

ನಾವೆಲ್ಲರೂ ಸಿಕ್ಕಾಪಟ್ಟೆ ಟೆನ್ಶನ್ ಪಾರ್ಟಿಗಳಪ್ಪಾ!

ಅಮ್ಮ ಏನೋ ಬೈದರು ಅಂತ ಮಗಳು ಬೇಸರ ಮಾಡ್ಕೊತಾಳೆ, ಮಗಳು ಎದುರುತ್ತರ ಕೊಟ್ಳು ಅಂತ ಅಮ್ಮ ಕಣ್ಣೀರಾಗ್ತಾರೆ. ಅತ್ತೆ-ಸೊಸೆ ನಡುವೆ ಆಗಾಗ ಅಪನಂಬಿಕೆಗಳು ಹುಟ್ಟುತ್ತವೆ.

ಮುಂಜಾನೆದ್ದು ಹೆಂಡತಿ ಸಹಸ್ರ ನಾಮಾರ್ಚನೆ ಮಾಡಿದ್ಲು ಅಂತ, ಮಗಳು ಸುಸ್ಸು ಮಾಡಿದ್ಲು ಅಂತ, ಗಂಡ ಮನೆಯ ಕೆಲಸದಲ್ಲಿ ಹೆಲ್ಪೇ ಮಾಡಿಲ್ಲ ಅಂತ, ರೋಡ್‌ನಲ್ಲಿ ಯಾರೋ ಅಡ್ಡ ಬಂದ ಅಂತ, ಕಂಡಕ್ಟರ್ ಚಿಲ್ಲರೆ ತಕರಾರು ಮಾಡಿದ ಅಂತ, ಆಫೀಸಿನಲ್ಲಿ ಬಾಸ್ ಏನೋ ಕಿರಿಕಿರಿ ಮಾಡಿದರು ಅಂತ, ಸಹೋದ್ಯೋಗಿ ಮುಖಕ್ಕೆ ಹೊಡೆದಂತೆ ಏನೋ ಅಂದ ಅಂತ.. ಟೆನ್ಶನ್ ಮಾಡ್ಕೊಳ್ಳೋಕೆ ನಮ್ಗೆ ಸಾವಿರ ದಾರಿಗಳಿರ್ತವೆ.

ದುರಂತವೆಂದರೆ, ನಾವು ಆ ಟೆನ್ಶನ್‌ಗಳನ್ನು ಅಲ್ಲೇ ಬಿಟ್ಟುಬಿಡೋಲ್ಲ.. ಮನೆಯ ಸಿಟ್ಟನ್ನು ಆಫೀಸಲ್ಲಿ, ಆಫೀಸಿನ ಕಿರಿಕಿರಿಯನ್ನು ಮನೇಲಿ ಎಳೆದಾಡಿ ರಂಪ ಮಾಡಿಕೊಳ್ಳುತ್ತೇವೆ. ಏನೂ ಮಾಡಿಲ್ಲ ಅಂದ್ರೂ ಇಡೀ ದಿನದ ಮೂಡೆಲ್ಲ ಹಾಳಾಯಿತು ಅಂತ ಕತ್ತು ಬಾಗಿಸುತ್ತೇವೆ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ತೇವೆ. ಇದರಿಂದ ನೆಮ್ಮದಿ ಕೆಡುತ್ತೆ, ಸಂಬಂಧಗಳು ಕಡಿದು ಹೋಗ್ತವೆ. ಸಿಟ್ಟು ಸ್ನೇಹವನ್ನು ಮುರಿಯುತ್ತೆ. ಸಣ್ಣ ಯಾವುದೋ ಕಾರಣದಿಂದ ಆರಂಭವಾದ ವೈಮನಸ್ಸು ಮತ್ತೆ ಸರಿ ಮಾಡಲಾಗದಷ್ಟು ಹಾಳಾಗಿ ಬಿಡುತ್ತದೆ.

ಇದೆಲ್ಲ ಯಾಕಾಗುತ್ತೆ? ಆ ಕ್ಷಣದಲ್ಲೇ ನಿವಾರಿಸಿಕೊಳ್ಳಬಹುದಾದ ಒಂದು ಸಮಸ್ಯೆಯನ್ನು ದೊಡ್ಡದಾಗಿಸಿಕೊಳ್ಳೋದು, ದಿನವಿಡೀ ಅದರ ಬಗ್ಗೆನೇ ಯೋಚನೆ ಮಾಡಿ ಮಂಡೆ ಹಾಳು ಮಾಡಿಕೊಳ್ಳೋದು, ದ್ವೇಷ ಕಟ್ಟಿಕೊಳ್ಳೋದು.. ಹೀಗೆ ಸಣ್ಣ ಸಣ್ಣ ವಿಷಯಗಳು ನಮ್ಮ ಟೈಮ್, ಎನರ್ಜಿ, ಕ್ರಿಯಾಶೀಲತೆ ಎಲ್ಲವನ್ನು ಹಾಳು ಮಾಡಿಬಿಡುತ್ತದೆ.

ಇದನ್ನು ಹೀಗೆ ಹೇಳೋದಕ್ಕಿಂತ ಒಂದು ಕಥೆ ಮೂಲಕ ಹೇಳಿದರೆ ಇನ್ನೂ ಅದ್ಭುತವಾಗಿರುತ್ತೆ.

ಕಥೆ ಶುರು..
ನೀವು ನಿಮ್ಮ ಕುಟುಂಬವರ ಜತೆ ಕೂತ್ಕೊಂಡು ಬೆಳಗ್ಗಿನ ಉಪಾಹಾರ ಮಾಡ್ತಾ ಇದ್ದೀರಿ. ನಿಮ್ಮ ಮಗಳು ಏನೋ ಕಿತಾಪತಿ ಮಾಡಿ ಕಾಫಿ ಕಪ್ಪನ್ನು ನಿಮ್ಮ ಬ್ಯುಸಿನೆಸ್ ಶರ್ಟ್ ಮೇಲೆ ಉರುಳಿಸಿ ಬಿಡ್ತಾಳೆ. ನೀವು ಏನು ಮಾಡ್ತೀರಾ? ಸಿಕ್ಕಾಪಟ್ಟೆ ಸಿಟ್ಟಾಗ್ತೀರಿ.. ಮಗುವನ್ನು ಬಾಯಿಗೆ ಬಂದಂತೆ ಬೈತೀರಿ. ಅವಳು ಜೋರಾಗಿ ಅಳಲು ಶುರು ಮಾಡುತ್ತಾಳೆ. ಅವಳ ಬಳಿಕ ನಿಮ್ಮ ಅರ್ಚನೆ ಹೆಂಡ್ತಿಗೆ. ಟೇಬಲ್‌ನ ಅಂಚಿನಲ್ಲಿ ಯಾಕೆ ಕಾಫಿ ಕಪ್ ಇಟ್ಟಿದ್ದು ಅಂತ ಬೈತೀರಿ. ಅವಳು ಬಿಡ್ತಾಳಾ? ಮಾತಿಗೆ ಮಾತು ಬೆಳೆಯುತ್ತೆ.

ನೀವು ಕೋಣೆಗೆ ಹೋಗಿ ಶರ್ಟ್ ಬದಲಿಸಿಕೊಂಡು ಬರುತ್ತೀರಿ.. ನಿಮ್ಮ ಮಗಳು ಇನ್ನೂ ಅಳುತ್ತಲೇ ಇದ್ದಾಳೆ.. ಬ್ರೇಕ್ ಫಾಸ್ಟ್ ಆಗಿಲ್ಲ. ಅವಳು ಶಾಲೆಗೆ ರೆಡಿ ಆಗಿಲ್ಲ.

ಅಯ್ಯೋ ಸ್ಕೂಲ್ ಬಸ್ ಆಗಲೇ ಹೋಗಿ ಆಗಿದೆ. ನಿಮ್ಮ ಹೆಂಡ್ತಿಗೂ ಕೆಲಸಕ್ಕೆ ಹೋಗಬೇಕು. ನೀವು ಕಾರು ಹಿಡ್ಕೊಂಡು ಮಗಳನ್ನು ಶಾಲೆಗೆ ಬಿಟ್ಟು ಹೋಗಬೇಕು. ಆಗಲೇ ಟೈಮಾಗಿಬಿಟ್ಟಿದೆ. ಟೈಮಿಲ್ಲ ಅಂತ ಗಾಡಿಯನ್ನು ಫಾಸ್ಟಾಗಿ ಓಡಿಸ್ತೀರಿ.. ಆಗ ಪೊಲೀಸರು ನಿಲ್ಲಿಸಿ ದಂಡ ಕಟ್ಟಲು ಸೂಚಿಸ್ತಾರೆ.

ಶಾಲೆ ಆವರಣಕ್ಕೆ ಬಂದಾಗ ಮಗಳು ಬಾಯ್ ಕೂಡಾ ಹೇಳದೆ ಇಳಿದು ಓಡುತ್ತಾಳೆ.. ತಿರುಗಿಯೂ ನೋಡದೆ. ನೀವು ಆಫೀಸಿಗೆ 20 ನಿಮಿಷ ತಡವಾಗಿ ಬಂದಿದ್ದೀರಿ.. ಎಲ್ಲರೂ ಅವರವರ ಸೀಟ್‌ನಲ್ಲಿ ಕೂತು ನಿಮ್ಮನ್ನೇ ನೋಡುತ್ತಿದ್ದಾರೆ.. ಅಯ್ಯೋ.. ನೀವು ಸೂಟ್‌ಕೇಸೇ ಮರೆತು ಬಂದಿದ್ದೀರಿ.. ಅವಸರದಲ್ಲಿ.

ಒಂದಲ್ಲ ಒಂದು ಕಿರಿಕಿರಿಗಳು ಒಂದು ಕ್ಷಣವೂ ನೆಮ್ಮದಿ ಇಲ್ಲದಂತೆ ಮಾಡಿಬಿಡುತ್ತವೆ..

ಸಂಜೆ ಮನೆಗೆ ಬಂದಾಗ ಹೆಂಡ್ತಿ ಮತ್ತು ಮಗಳು ಎಂದಿನಂತೆ ಸ್ವಾಗತಿಸುವುದೂ ಇಲ್ಲ. ಕಾಫಿಯನ್ನು ಕುಕ್ಕಿ ಹೋದ ಸದ್ದು.. ಅವರ ಮನಸ್ಸಿನಲ್ಲೂ ನೋವು.

ಅಷ್ಟಕ್ಕೂ ಈ ಕಿರಿಕಿರಿಗೆ ಏನು ಕಾರಣ?
* ಕಾಫಿ ಕಾರಣವಾ?
* ನಿಮ್ಮ ಮಗಳು ಕಾರಣವಾ?
* ಪೊಲೀಸ್ ದಂಡ ಹಾಕಿದ್ದು ಕಾರಣವಾ?
* ನೀವು ಕಾರಣವಾ?

ಜಸ್ಟ್ ಯೋಚನೆ ಮಾಡಿ..
ಉತ್ತರ: 4.. ನೀವು!

ಯೆಸ್.. ನೀವು ಕಾಫಿ ವಿಷಯದಲ್ಲಿ ಸಣ್ಣಮಟ್ಟದ ತಾಳ್ಮೆಯನ್ನು ವಹಿಸಿದ್ದರೆ ಇಡೀ ದಿನ ಹೀಗಾಗುತ್ತಿರಲಿಲ್ಲ. ಕೇವಲ ಐದು ಸೆಕೆಂಡ್‌ಗಳ ನಿಮ್ಮ ವರ್ತನೆ ಇದೆಲ್ಲದಕ್ಕೂ ಕಾರಣವಾಯಿತು ಎಂದರೆ ನಂಬುತ್ತೀರಾ?

ಘಟನೆಗಳನ್ನು ಮತ್ತೆ ರಿಕಾಲ್ ಮಾಡಿಕೊಳ್ಳಿ.. ಮಗಳ ಕಿತಾಪತಿಯಿಂದ ಕಾಫಿ ಶರಟಿನ ಮೇಲೆ ಚೆಲ್ಲಿತು. ನಿಮ್ಮ ಮಗಳು ಅಳೋದಕ್ಕೆ ಮುಂದಾದಳು. ನೀವು ಮೆತ್ತಗೆ ಹೇಳುತ್ತೀರಿ: ಪರವಾಗಿಲ್ಲ ಮಗಳೇ.. ನೆಕ್ಸ್ಟ್ ಟೈಮ್ ಜಾಗತೆ ಮಾಡ್ಬೇಕು. ಅವಸರ ಮಾಡ್ಬಾರ್ದು'.

ನೀವು ಕೂಡಲೇ ಎದ್ದು ಕೋಣೆಗೆ ಹೋಗಿ ಡ್ರೆಸ್ ಚೇಂಜ್ ಮಾಡಿ, ಸೂಟ್ ಕೇಸ್ ಹಿಡಿದುಕೊಂಡು ಬಂದಿದ್ದರೆ ಅಷ್ಟು ಹೊತ್ತಿಗೆ ಮಗಳು ಬಸ್ ಹತ್ತೋ ಹೊತ್ತಲ್ಲಿ ಬೀಸೋ ಕೈಗಳಿಗೆ ಟಾಟಾ ಹೇಳಬಹುದಿತ್ತು.

ಹೆಂಡತಿಗೊಂದು ಹೂಮುತ್ತು ಕೊಟ್ಟು ಮನೆ ಬಿಡಬಹುದಿತ್ತು. ಟ್ರಾಫಿಕ್ ಪೊಲೀಸ್ ನಿಲ್ಲಿಸ್ತಾನೇ ಇರಲಿಲ್ಲ. ಹತ್ತು ನಿಮಿಷ ಮೊದಲೇ ಆಫೀಸಿಗೆ ಬಂದು ಸಹೋದ್ಯೋಗಿಗಳಿಗೊಂದು ಚಿಯರ್‌ಫುಲ್ ಹಾಯ್ ಹೇಳಬಹುದಿತ್ತು. ಮನೆಗೆ ಹೋದ ಕೂಡಲೇ ಹೆಂಡತಿಯ ಪ್ರೀತಿಯ ಕಾಫಿ ಮತ್ತು ಮಗಳ ತಬ್ಬುಗೆ ನಿಮಗೆ ಕಾಯುತ್ತಿರುತ್ತಿತ್ತು.

ಒಂದು ಕೆಟ್ಟ ಮತ್ತು ಒಳ್ಳೆಯ ದಿನದ ನಡುವಿನ ಡಿಫರೆನ್ಸ್ ಆ 5 ಸೆಕೆಂಡ್‌ಗಳಲ್ಲಿತ್ತು. ನಿಮ್ಮ ಆರಂಭಿಕ ಪ್ರತಿಕ್ರಿಯೆಯಲ್ಲಿತ್ತು... ಅಲ್ಲವೇ?

ಇಂತಹುದೊಂದು ಸೂಪರ್ಬ್ ಸ್ಟೋರಿಯನ್ನು ಹೇಳಿದ್ದು ಸ್ಟೀಫನ್ ಕಾವ್. ಜಗತ್ಪ್ರಸಿದ್ಧ ವ್ಯಕ್ತಿತ್ವ ವಿಕಸನ ತಜ್ಞ. ಕೆಲವು ದಿನಗಳ ಹಿಂದಷ್ಟೇ ತೀರಿ ಹೋದ ಆ ಮಹಾನುಭಾವ ಈ ನಿಜ ಕಥೆಗೆ ಕೊಟ್ಟ ಶೀರ್ಷಿಕೆ: 10/90.

ಇದರರ್ಥ ನಿಜವಾಗಿ ಘಟನೆ ನಡೆಯೋದು 10 ಶೇಕಡಾ ಮಾತ್ರ. ಅದಕ್ಕೆ ನಾವು ಕೊಡುವ ಪ್ರತಿಕ್ರಿಯೆ ಮುಂದಿನ ಶೇ. 90 ಭಾಗವನ್ನು ನಿರ್ಧರಿಸುತ್ತದೆ ಅನ್ನೋದು ಅವರ ಮಾತು.

ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರೆ ವಿಪರೀತ ಟೆನ್ಶನ್ ಮಾಡ್ತೇವೆ.. ಯಾರನ್ನೋ ಬೈತೇವೆ, ಬಿಪಿ ರೈಸ್ ಮಾಡಿಕೊಳ್ತೇವೆ, ಫಾಸ್ಟಾಗಿ ಓಡಿಸ್ತೇವೆ.. ನೆನಪಿಡಿ, ಟ್ರಾಫಿಕ್‌ನಲ್ಲಿ ಬೀಳೋ ಕೆಂಪು ಲೈಟನ್ನು ನಿಮಗೆ ಕಂಟ್ರೋಲ್ ಮಾಡೋಕೆ ಆಗೊಲ್ಲ.. ಆದರೆ, ಅದಕ್ಕೆ ತೋರುವ ಪ್ರತಿಕ್ರಿಯೆಯನ್ನು ಕಂಟ್ರೋಲ್ ಮಾಡ್ಕೋಬಹುದು. ಆಫೀಸಿಗೆ ಇವತ್ತೊಂದು ದಿನ 5 ನಿಮಿಷ ತಡವಾಗಿ ಹೋದರೆ ಆಕಾಶವೇನೂ ಉರುಳಿ ಬೀಳೊಲ್ಲ ಅನ್ನುವ ತಾಳ್ಮೆಯನ್ನು, ಕೂಲ್ ನೆಸ್‌ನ್ನು ಕಾಪಾಡಿಕೊಳ್ಳೋದು ನಮ್ಮ ಕೈಯಲ್ಲೇ ಇದೆ.

ಆಫೀಸಿನಲ್ಲಿ ಯಾರೋ ಏನೋ ಅಂದರು ಅಂತ ಪ್ರತಿಕ್ರಿಯೆ ನೀಡಲು ಹೋಗಿ ನಾವೇ ಸಣ್ಣೋರಾಗ್ತೇವೆ, ದೊಡ್ಡ ಸದ್ದು ಮಾಡಿ ಗಲಾಟೆಕೋರರು ಎನಿಸುತ್ತೇವೆ. ಬಾಸ್‌ಗೆ ಎದುರು ಮಾತನಾಡಲು ಹೋಗಿ ಕೆಲವೊಮ್ಮೆ ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬರುತ್ತದೆ.

ಅದರ ಬದಲು, ಯಾರು ಏನೇ ಹೇಳಿದರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿಮ್ಮ ಪಾಡಿಗೆ ನೀವಿದ್ದರೆ, ಕನಿಷ್ಠ ನಿಮ್ಮ ನೆಮ್ಮದಿಯನ್ನಾದರೂ ನೀವು ಉಳಿಸಿಕೊಳ್ಳಬಹುದು ಅಂತಾರೆ ಕಾವ್. ಜಸ್ಟ್ ಒಮ್ಮೆ ಟ್ರೈ ಮಾಡಿ ನೋಡಿ.
 
ಕೃಪೆ : ವಿಜಯ ಕರ್ನಾಟಕ

ಮನಸ್ಸಿನ ಗಾಯ ದೇಹಕ್ಕೆ ಅಪಾಯ

ಮನಸ್ಸಿನ ಗಾಯ ದೇಹಕ್ಕೆ ಅಪಾಯ
                      ಡಾ. ಕೆ. ರಾಮಚಂದ್ರ

ಒತ್ತಡದ ಬದುಕು ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹಲವು ಮಾನಸಿಕ ಸಮಸ್ಯೆಗಳಿಗೂ ಇದೇ ಒತ್ತಡ ದಾರಿ ಮಾಡುತ್ತದೆ.


ಎಷ್ಟೋ ಬಾರಿ ಮಾನಸಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಇದೇ ದೀರ್ಘಕಾಲದ ರೋಗವಾಗಿ ಕಾಡಬಹುದು. ಮಾನಸಿಕ ಒತ್ತಡದಿಂದ ದೈಹಿಕ ಬದಲಾವಣೆಗಳು ಕೂಡ ಕಾಣಿಸುತ್ತವೆ.


ದೇಹದ ಮೇಲೆ ಪರಿಣಾಮ

ಮಾನಸಿಕ ಒತ್ತಡದಿಂದ ಉಂಟಾಗುವ ಸಮಸ್ಯೆಗಳೆಂದರೆ ಕೂದಲು ಉದುರುವಿಕೆ, ಬಾಯಿ ಒಣಗುವಿಕೆ, ಪದೇ ಪದೇ ಬಾಯಿ ಹುಣ್ಣು, ಕಾರಣವಿಲ್ಲದೆ ಕೆರಳುವಿಕೆ, ಹೆಚ್ಚು ಹೃದಯಬಡಿತ, ರಕ್ತದೊತ್ತಡ ಹೆಚ್ಚುವಿಕೆ, ಅಂಗೈ ಮತ್ತು ಮುಖದಲ್ಲಿ ಬೆವರುವಿಕೆ, ಮಾಂಸಖಂಡಗಳ ಸೆಳೆತ, ಲೈಂಗಿಕ ಆಸಕ್ತಿ ಕುಂದುವಿಕೆ, ಉಸಿರಾಟದ ತೊಂದರೆ, ಮೈಕೈಯಲ್ಲಿ ಹೆಚ್ಚು ನೋವು, ಮಾಂಸಖಂಡಗಳ ಬಿಗುವು, ಜೀರ್ಣಶಕ್ತಿ ಕುಂದುವಿಕೆ, ಹಸಿವಿಲ್ಲದಿರುವುದು, ಕರಳು ಮರುವರ್ತಿಕ, ಜಠರದಲ್ಲಿ ಉರಿ, ಹೆಚ್ಚು ಬೆವರುವಿಕೆ ಉಂಟಾದಾಗ ಎಚ್ಚರ ವಹಿಸುವುದು ಹಾಗೂ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಪರಿಹಾರ

ದಿನನಿತ್ಯ ಜೀವನವನ್ನು ಯೋಜನಾಬದ್ಧವಾಗಿ ರೂಪಿಸಲು ಪ್ರಯತ್ನಿಸಿ.ಕುಟುಂಬದ ಸದಸ್ಯರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸಿ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತನವಿರಲಿ. ಮೂಢನಂಬಿಕೆ ಇದ್ದರೆ ಬಿಡಿ, ಭಗವಂತನಲ್ಲಿ ನಂಬಿಕೆ ಇಡಿ. ಬಾಬಾ, ಯೋಗಿಗಳು ಹಾಗೂ ಸ್ವಾಮೀಜಿಗಳ ಸಹವಾಸದಿಂದ ದೂರವಿರಿ.ದಿನನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ದೇವಸ್ಥಾನಗಳಿಗೆ ಭೇಟಿ, ಉತ್ತಮರ ಸಹವಾಸ, ಉತ್ತಮ ಸಂಗೀತ, ಕುಟುಂಬ ಸದಸ್ಯರ ಜತೆ ಪ್ರವಾಸ, ವಿಹಾರ, ಉತ್ತಮ ಸ್ನೇಹಿತರ ಜತೆ ಹರಟೆ, ಹಾಸ್ಯ ಇವುಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಕ್ರಮಬದ್ಧ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳಿ.ಅತಿ ಶೀಘ್ರ ಶ್ರೀಮಂತನಾಗಬೇಕೆಂಬ ಹುಚ್ಚು ಹಂಬಲ ಹಾಗೂ ಅಡ್ಡದಾರಿ ಹಿಡಿಯಲು ಪ್ರಯತ್ನಿಸಬೇಡಿ. ನಿಮ್ಮ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕ್ರಮಬದ್ಧ ಜೀವನದ ಅಳವಡಿಕೆ ಹಾಗೂ ನಿಮ್ಮ ನಂಬಿಕಸ್ಥ ವೈದ್ಯರ ಸಲಹೆ ಪಡೆದು ದೀರ್ಘಕಾಲ ಉತ್ತಮ ಆರೋಗ್ಯದಿಂದ ಬಾಳಲು ಪ್ರಯತ್ನಿಸಿ.
 
ಕೃಪೆ : ವಿಜಯ ಕರ್ನಾಟಕ