Saturday, February 4, 2012

ಗುಜರಿ ಅಂಗಡಿಯ ಅವಾಂತರ !

ಬೆಂಗಳೂರು : ಗುಜರಿ ಅಂಗಡಿಯೊಂದರಲ್ಲಿ ಶಂಕಾಸ್ಪದ ವಸ್ತು ನ್ಪೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮೂರು ಮಂದಿ ಗಾಯಗೊಂಡಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಈ ಘಟನೆಯಲ್ಲಿ ಹುಳಿಮಾವು ನಿವಾಸಿ ಸೆಲ್ವಿ, ಪುತ್ರ ಸರವಣ ಹಾಗೂ ಸುರೇಶ್‌ ತೀವ್ರವಾಗಿ ಗಾಯಗೊಂಡಿದ್ದು, ಇವರ ಪೈಕಿ ಸೆಲ್ವಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ

ಹುಳಿಮಾವಿನ ಶ್ರೀ ರಾಮದೇವರ ದೇವಾಲಯ ರಸ್ತೆಯ ಬಾಲಕೃಷ್ಣ ಅವರ ಗುಜರಿ ಅಂಗಡಿಗೆ ಮೃತ ಅಪರಿಚಿತ ವ್ಯಕ್ತಿಯು ಬೆಳಗ್ಗೆ 11 ಗಂಟೆಯಲ್ಲಿ ನಿರುಪಯೋಗಿ ವಸ್ತು ಮಾರಾಟ ಮಾಡುವ ಸಲುವಾಗಿ ಬಂದಿದ್ದಾನೆ. ಆಗ ಗ್ರಾಹಕನಿಗೆ ಕಾಪರ್‌ ವೈರ್‌ ಬೇರ್ಪಡಿಸಿ ಕೊಡುವಂತೆ ಅಂಗಡಿ ಮಾಲೀಕರೂ ಆಗಿರುವ ಸೆಲ್ವಿ ಸೂಚಿಸಿದ್ದಾರೆ. ಅದರಂತೆ ಆ ವಸ್ತುವಿನಿಂದ ತಾಮ್ರದ ವೈರ್‌ ಬೇರ್ಪಡಿಸಲು ಕಲ್ಲಿನಿಂದ ಹೊಡೆದಾಗ ಹಠಾತ್‌ ಸ್ಫೋಟ ಉಂಟಾಗಿದೆ.

ಈ ನ್ಪೋಟದಿಂದ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸೆಲ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಅಂಗಡಿಯಲ್ಲಿದ್ದ ಸರವಣ ಹಾಗೂ ದಾರಿಯಲ್ಲಿ ಹೋಗುತ್ತಿದ್ದ ಸತೀಶ್‌ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪರಾಗಿದ್ದಾರೆ.

ಈ ನ್ಪೋಟದ ತೀವ್ರತೆಗೆ ಅಕ್ಕಪಕ್ಕದ ಅಂಗಡಿಗಳ ಗಾಜುಗಳು ಪುಡಿ ಪುಡಿಯಾಗಿದ್ದು, ಕೆಲ ಹೊತ್ತು ಸಾರ್ವಜನಿಕರು ಭಯಭೀತರಾಗಿದ್ದರು. ಈ ಘಟನಾ ಸ್ಥಳಕ್ಕೆ ಶ್ವಾನ ದಳ, ವಿಧಿ ವಿಜ್ಞಾನ ತಜ್ಞರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಜಿಲೇಟಿನ್‌ ಕಡ್ಡಿಗಳು?

ಪೊಲೀಸರು ಈ ಶಂಕಾಸ್ಪದ ವಸ್ತುವಿನಿನಲ್ಲಿ ಜಿಲೆಟಿನ್‌ ಇದ್ದಿರಬಹುದು ಎಂದು ಶಂಕಿಸಿದ್ದಾರೆ. ಆದರೆ, ಸಾಮಾನ್ಯವಾಗಿ ಜಿಲೆಟಿನ್‌ಗೆ ತಾಮ್ರದ ತಂತಿ ಸುತ್ತಲಾಗುವುದಿಲ್ಲ. ಆದರೆ, ಉಂಡೆ ರೂಪದಲ್ಲಿದ್ದ ಈ ಶಂಕಾಸ್ಪದ ವಸ್ತುವಿನಲ್ಲಿ ಜಿಲೆಟಿನ್‌ ಹಾಗೂ ತಾಮ್ರದ ವೈಯರ್‌ ಇದ್ದಿರಬಹುದು. ಅದನ್ನು ಬೇರ್ಪಡಿಸಲು ಹೋದಾಗ ಸ್ಫೋಟ ಸಂಭವಿಸಿರಬಹುದು ಎಂಬುದು ಪೊಲೀಸರ ಅಂದಾಜು.

ಅನೇಕಲ್‌ ತಾಲೂಕು ವ್ಯಾಪ್ತಿಯ ಜಲ್ಲಿ ಕ್ರಷರ್‌ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳ ನ್ಪೋಟಕಕ್ಕೆ ಬಳಸಿದ್ದ ನಿರ್ಜೀವ ಜಿಲೇಟಿನ್‌ ಕಡ್ಡಿಗಳನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಲು ಬಂದಿರಬಹುದು ಎನ್ನಲಾಗಿದೆ.

ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯ ಪೂರ್ವಾಪರ ಮಾಹಿತಿ ಪೊಲೀಸರಿಗೆ ಲಭ್ಯವಾದ ಬಳಿಕ ಎಲ್ಲಿಂದ ಗುಜರಿಗೆ ಅಂಗಡಿಗೆ ನಿರುಪ ಯುಕ್ತ ವಸ್ತು ಸರಬರಾಜಾಗಿದೆ ಎಂಬ ಬಗ್ಗೆ ಸುಳಿವು ಸಿಗಲಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ಸಿಕ್ಕಿದ ವಸ್ತುಗಳನ್ನು ಬಾಂಬ್‌ ನಿಷ್ಕ್ರಿಯ ದಳವು ಸಂಗ್ರಹಿಸಿದ್ದು, ಇದನ್ನು ಪರೀಕ್ಷೆಗೊಳಪಡಿಸಿದೆ. ಬಾಂಬ್‌ ನಿಷ್ಕ್ರಿಯ ದಳದ ಪರೀಕ್ಷೆಯಲ್ಲಿ ನ್ಪೋಟಕ ನಿಖರ ಕಾರಣ ತಿಳಿದು ಬರಲಿದೆ.

ಈ ಘಟನಾ ಸ್ಥಳಕ್ಕೆ ಅಗ್ನೇಯ ವಿಭಾಗದ ಡಿಸಿಪಿ ಡಾ.ಹರ್ಷ ಹಾಗೂ ಎಸಿಪಿ ರಾಚಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟ ದಾರಿ ತಪ್ಪಿಸಲು ಪೊಲೀಸರ ಯತ್ನ?

ಹುಳಿಮಾವು ನ್ಪೋಟ ಪ್ರಕರಣದಲ್ಲಿ ತಪ್ಪಿತಸ್ಥರ ರಕ್ಷಣೆಗೆ ಕೆಲ ಪೊಲೀಸ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತದೆ. ಕ್ರಷರ್‌ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ನ್ಪೋಟಕ ವಸ್ತು ಬಳಕೆಗೆ ಪೊಲೀಸರ ಅನುಮತಿ ಪಡೆಯಬೇಕಿದೆ. ಹಾಗಾಗಿ ಪ್ರಭಾವಿ ಗಣಿ ಉದ್ಯಮಿಗಳ ಕೊರಳಿಗೆ ಈ ಗುಜರಿ ಅಂಗಡಿ ನ್ಪೋಟ ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆ ಅರಿತು ತನಿಖೆ ದಿಕ್ಕು ತಪ್ಪಿಸುವ ಯತ್ನ ನಡೆದಿದೆ ಎನ್ನಲಾಗುತ್ತದೆ.

ಮೃತಪಟ್ಟ ವ್ಯಕ್ತಿಯ ಮಾಹಿತಿ ಲಭ್ಯವಿದ್ದರು ಸಹ ಬಹಿರಂಗಗೊಳಿಸದೆ ಗೌಪ್ಯವಾಗಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಹುಳಿಮಾವು ಗುಜರಿ ಅಂಗಡಿ ನ್ಪೋಟ ಪ್ರಕರಣ ಸಂಬಂಧ ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ನೀಡುವ ವರದಿಯಿಂದ ನ್ಪೋಟಕಕ್ಕೆ ನಿಖರ ಕಾರಣ ತಿಳಿದು ಬರಲಿದೆ. ಈ ವರದಿ ಬಂದ ನಂತರವೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಮೃತ ವ್ಯಕ್ತಿಯ ಪೂರ್ವಾಪರ ಮಾಹಿತಿಗೆ ತನಿಖೆ ನಡೆಸಲಾಗುತ್ತಿದೆ.
                                                                                              -ಡಾ.ಹರ್ಷ, ಡಿಸಿಪಿ, ಅಗ್ನೇಯ ವಿಭಾಗ

No comments:

Post a Comment