Sunday, February 12, 2012

ಪ್ರೇಮಿಗಳ ದಿನಕ್ಕೆ ಇಲ್ಲ ಅಡ್ಡಿ ! ಹ್ಯಾಪಿ ವ್ಯಾಲೆಂಟೇನ್ ಡೇ !


ನವದೆಹಲಿ (ಪಿಟಿಐ/ ಐಎಎನ್ಎಸ್): ಪ್ರೇಮಿಗಳಿಗೆ ಇಲ್ಲಿದೆ ಸಂತಸದ ಸುದ್ದಿ! ಬಲಪಂಥೀಯ ಸಂಘಟನೆಗಳು ಈ ವರ್ಷದ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸದಿರಲು ನಿರ್ಧರಿಸಿವೆ. ಹಾಗಾಗಿ ಫೆಬ್ರುವರಿ 14ರಂದು ಯುವ ಜೋಡಿಗಳು ನಿರಾತಂಕವಾಗಿ ಪ್ರೇಮಿಗಳ ದಿನ ಆಚರಿಸಬಹುದು.

ಬಲಪಂಥೀಯ ಸಂಘಟನೆಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿರುವುದೇ ವಿರೋಧ ವ್ಯಕ್ತಪಡಿಸದಿರಲು ಪ್ರಮುಖ ಕಾರಣ ಎನ್ನಲಾಗಿದೆ.

`ಕಳೆದ ವರ್ಷದಿಂದ ಪ್ರೇಮಿಗಳ ದಿನವನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದನ್ನು ಕೈಬಿಟ್ಟಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದನ್ನು ನಾವು ತಪ್ಪಿಸಲು ಆಗುವುದಿಲ್ಲ. ಅಲ್ಲದೇ ಅದಕ್ಕೆ ವಿರೋಧಿಸುತ್ತಿರುವುದರಿಂದ ನಮ್ಮ ಬಗ್ಗೆ ಜನರಿಗೆ ತಪ್ಪು ಭಾವನೆ ಬರುತ್ತಿದೆ` ಎಂದು ಶಿವಸೇನಾದ ದೆಹಲಿ ಘಟಕದ ಸಂಯೋಜಕ ಓಂ ದತ್ತ ಪ್ರಕಾಶ್ ಹೇಳಿದ್ದಾರೆ.

`ಪ್ರೇಮಿಗಳ ದಿನ ಆಚರಿಸುವ ಪ್ರೇಮಿಗಳು ನಮ್ಮ ಕಣ್ಣಿಗೆ ಬಿದ್ದರೆ ಮದುವೆ ಮಾಡಿಸುತ್ತೇವೆ ಅಥವಾ ಅವರನ್ನು ಪೋಷಕರು, ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದೆವು. ಆದರೆ, ಈ ವರ್ಷ ತಡೆ ಒಡ್ಡದಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ` ಎಂದು ಬಜರಂಗ ದಳದ ಕಾರ್ಯಕರ್ತ ವಿನೋದ್ ಶರ್ಮ ಹೇಳಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಶ್ರೀರಾಮ ಸೇನೆಯು, ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯರ ಅಂಧಾನುಕರಣೆ ಎಂದು ಆರೋಪಿಸಿ ಜಮ್ಮುವಿನಲ್ಲಿ ಭಾನುವಾರ ಶುಭಾಶಯ ಪತ್ರಗಳನ್ನು ಸುಟ್ಟಿದೆ.

`ಪ್ರೇಮಿಗಳ ದಿನ ಆಚರಿಸುವುದಕ್ಕೆ ನಮ್ಮ ಬೆಂಬಲ ಇಲ್ಲ. ಆದರೆ, ಇದಕ್ಕೆ ಭಿನ್ನ ಮಾರ್ಗದಲ್ಲಿ ವಿರೋಧಿಸಲು ಯೋಜನೆ ರೂಪಿಸಲಾಗಿದೆ` ಎಂದು ವಿಶ್ವ ಹಿಂದೂ ಪರಿಷತ್‌ನ ವಿಜಯ್ ಬನ್ಸಲ್ ತಿಳಿಸಿದ್ದಾರೆ.

`ಪ್ರೇಮಿಗಳ ದಿನಾಚರಣೆಯಂದು ಯುವ ಪ್ರೇಮಿಗಳು ಅಸಭ್ಯ ನೃತ್ಯ ಸೇರಿದಂತೆ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಲು ಕೋರಿ ದೆಹಲಿ ಮತ್ತು ಸುತ್ತಮುತ್ತಲಿನ ಪಬ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ` ಎಂದು ಬನ್ಸಲ್ ತಿಳಿಸಿದ್ದಾರೆ.

`ಯುವಕ/ಯುವತಿಯರಿಂದ ಹಣ ಸುಲಿಯುವ ಏಕೈಕ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪೆನಿಗಳು ಇಂತಹ ದಿನಗಳ ಆಚರಣೆಗೆ ಹೆಚ್ಚಿನ ಪ್ರಚಾರ ಮತ್ತು ಒತ್ತು ನೀಡುತ್ತಿವೆ. ಆ ದಿನ ಪ್ರೇಮಿಗಳು ಶುಭಾಶಯ ಪತ್ರ, ಹೂ, ಚಿನ್ನದ ಆಭರಣ, ಚಾಕೊಲೇಟ್, ಮೊಬೈಲ್, ಎಂಪಿ3 ಪ್ಲೇಯರ್, ಕೈ ಗಡಿಯಾರವನ್ನು ಕಾಣಿಕೆಯಾಗಿ ನೀಡಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಇಂತಹ ಹಣ ಮಾಡುವ ದಂಧೆಯ ವಿರುದ್ಧ ಯುವಜನಾಂಗ ಎಚ್ಚೆತ್ತುಕೊಳ್ಳಬೇಕು` ಎಂದು ರಾಷ್ಟ್ರವಾದಿ ಶಿವಸೇನಾದ ಜೈ ಭಗವಾನ್ ಗೋಯಲ್ ಸಲಹೆ ನೀಡಿದ್ದಾರೆ.

`ಕಳೆದ ಸಾಲಿನ ಪ್ರೇಮಿಗಳ ದಿನಾಚರಣೆಯ ವಾರದಲ್ಲಿ 12,000 ಕೋಟಿ ರೂಪಾಯಿ ವ್ಯವಹಾರ ನಡೆದಿತ್ತು` ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ತಿಳಿಸಿದೆ.
                                                                                                            ಕೃಪೆ : ಪ್ರಜಾವಾಣಿ

No comments:

Post a Comment