Monday, February 13, 2012

ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...

ಹುಡುಗೀ,
"ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?"ಎಂದು ಕೇಳಿದವನು ಗಾಲಿಬ್.

ಈ ಬದುಕಿನಲ್ಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ ಒಂದು ಅಮಾಯಕ ನಂಬಿಕೆ ಇರಬಹುದು!

ಮಲೆನಾಡಿನ ಮಾಮರದಲ್ಲೆಲ್ಲೋ ಚಿಗುರು ತಿಂದು ಕೂಗಿದ ಕೋಗಿಲೆಯ ಕೂಹೂವಿಗೆ ಬಯಲು ಸೀಮೆಯ ಮೂಲೆಯಲ್ಲಿರುವ ಮರದ ಮೇಲೆ ಕುಳಿತ ಹೆಸರಿಲ್ಲದ ಹಕ್ಕಿ ಅನುಭವಿಸಿದ ಹೇಳಿಕೊಳ್ಳಲಾಗದ ಖುಷಿಯಂತೆ ಈ ಬದುಕಿನಲಿ ನಡೆದು ಬಂದೆ! ಬರೀ ಕಿಳರಿಮೆಗಳೇ ತುಂಬಿದ ಈ ಹುಡುಗನ ಆತ್ಮವಿಶ್ವಾಸದಂತೆ!! ಆಮೇಲೇನಿದೆ ಈ ಬಾನು, ಈ ಭೂಮಿ ಯಾವುದು ಸಾಲದೆಂಬಂತೆ ತಿರುಗಾಡಿಬಿಟ್ಟೆವು ಸ್ಟಾರ್ ಹೋಟೆಲಿನಿಂದ ಬೀದಿ ಬದಿಯ ಗೊಲಗುಪ್ಪೆ ವರೆಗೆ. ಎಲ್ಲೆಲ್ಲು ನಾವೇ!!

ಒಂದೇ ಯೋಚನೆ,ಯೋಜನೆ,ಅಭಿರುಚಿ,ಕನಸು ಎಲ್ಲವು ಇದ್ದೂ, ನಾವು ಬೇರೆಯಾಗಿದ್ದು ಯಾಕೆ? I think ಇದು ಯಾವತ್ತಿಗೂ ಬಗೆಹರಿಯದ ಪ್ರಶ್ನೆ! ನಮ್ಮ ಅಹಂ, attitude, possessiveness, ಹೊಂದಾಣಿಕೆ, ಹಠ, ಜಗಳ ಹೀಗೆ ನೂರು ಕಾರಣಗಳು ಇದ್ದರೂ, ತಪ್ಪು ಯಾರದೇ ಇದ್ದರೂ ಸೋನು, ಚೂರೆ ಚೂರು ಇದೆಲ್ಲವನ್ನೂ ಬಿಟ್ಟು ಯೋಚನೆ ಮಾಡಿ ನೋಡು ಕೂಡಿ ಬದುಕಲಿಕ್ಕೆ ಸಾವಿರ ಕಾರಣ ಸಿಕ್ಕಾವು.


ಹೆಸರೇ ಕೇಳದ ದೂರದ ಊರುಗಳಲ್ಲಿ ಹುಟ್ಟಿ, ಬೆಳೆದು ಕೇವಲ ಈ ಪ್ರೀತಿಗಾಗಿಯೇ ನಾವಿಬ್ಬರು ಸೇರಿದೆವೇನೋ ಅನಿಸುತ್ತದೆ. ಬಿಡು ಇದೆಲ್ಲ ನನ್ನ ಪೆದ್ದು ಮನಸಿನ ಭಾವುಕ ಕನವರಿಕೆ ಇರಬಹುದು. ಇಡೀ ಬದುಕನ್ನು ಒಂದು ಲ್ಯಾಬ್ ನಲ್ಲಿನ ಪ್ರಾಕ್ಟಿಕಲ್ ಎಂದು ತಿಳಿದ ಸೈನ್ಸ್ ಹುಡುಗಿಯಲ್ಲವೇ ನೀನು? ಹಾಳು ಹಂಪೆಯ ಕಲ್ಲಿನ ರಥದ ಮುಂದೆ ನಿಂತು ಅಂದಿನ ಶ್ರೀ ಕೃಷ್ಣ ದೇವರಾಯನ ಸುವರ್ಣ ಕಾಲಕ್ಕೆ ಹೋಗಿ, ಅಂದಿನ ವೈಭವವನ್ನು ಇಂದು ಅನುಭವಿಸುವ ಇತಿಹಾಸ ಕಲಿತವನ ಮನದ ಭಾವುಕತೆ ನಿನಗೆಲ್ಲಿ ಅರ್ಥವಾದೀತು?

ಹುಣ್ಣಿಮೆಯ ರಾತ್ರಿ ಗೆಳತಿಯರೋಡಗೂಡಿ ಪಾನಿಪುರಿ ತಿಂದು ಬಂದು ಯಾವುದೊ ಇಂಗ್ಲಿಷ್ ಸಿನಿಮಾ ನೋಡೋಳಿಗೆ ಟೆರೇಸಿನ ಮೇಲೆ ಮಲಗಿ ಚುಕ್ಕಿಗಳೊಂದಿಗೆ ಮಾತನಾಡುತ್ತ, ಚಂದ್ರನ ಮೇಲೊಂದು ಕವಿತೆ ಕಟ್ಟಲು ಪರದಾಡುತಿರುವ ಈ ಹುಡುಗ ಹುಚ್ಚನ ಹಾಗೆ ಕಂಡರೆ ಅದು ನಿನ್ನ ತಪ್ಪಲ್ಲ ಬಿಡು. ಅಸಂಖ್ಯಾತ ಚುಕ್ಕಿಗಳಲು, ಚಲುವಾಂತ ಚನ್ನಿಗ ಚಂದ್ರನ ಮುಖದಲ್ಲೂ, ನಿನ್ನನ್ನೇ ಹುಡುಕುತಿರುವ ಈ ಪೆದ್ದು ಮನಸಿನ ಹುಡುಗ ನಿನಗೆ ನೆನಪಾಗುತ್ತಿಲ್ಲವೇ? I Miss You ಕಣೇ...
I Love You.
                                                                                                                 ಗಿರೀಶ್ ಕುಲಕರ್ಣಿ

No comments:

Post a Comment