Sunday, February 19, 2012

ಶಾಂತ ಚಿತ್ತಕ್ಕೆ ನೀರು ಕುಡಿಯಿರಿ....... !


ಲಂಡನ್ (ಪಿಟಿಐ): ನೀರು ಕುಡಿಯುವುದರಿಂದ ಆಗುವ ಲಾಭಗಳು ಎಲ್ಲರಿಗೂ ತಿಳಿದಿದ್ದೇ. ಈ ಪಟ್ಟಿಗೆ ಇನ್ನೊಂದು ಲಾಭ ಈಗ ಸೇರಿಕೊಂಡಿದೆ.

ವ್ಯಕ್ತಿಯನ್ನು ಶಾಂತಚಿತ್ತದಲ್ಲಿಡಲೂ ನೀರು ಸಹಕಾರಿ ಎಂದು ಕನೆಕ್ಟಿಕಟ್ ವಿಶ್ವವಿದ್ಯಾಲಯದ ತಜ್ಞರು ನಡೆಸಿರು ಹೊಸ ಅಧ್ಯಯನವೊಂದು ಹೇಳಿದೆ.

ಅದರಲ್ಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಸಂಯಮವನ್ನು ಕಳೆದುಕೊಳ್ಳುತ್ತಿರುವ ಅನುಭವ ಆಗುವ ಸಂದರ್ಭದಲ್ಲಿ ನೀರು ಕುಡಿದರೆ ಆತನ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನಕಾರರು ನಿರ್ಜಲೀಕರಣ (ಡಿ ಹೈಡ್ರೇಷನ್) ಕುರಿತಾಗಿಯೂ ಅಧ್ಯಯನ ನಡೆಸಿದ್ದು, ಅಲ್ಪ ಪ್ರಮಾಣದ ನಿರ್ಜಲೀಕರಣ ಕೂಡ ಮನಷ್ಯರ ಭಾವಸ್ಥಿತಿ (ಮೂಡು) ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಪತ್ತೆ ಹಚ್ಚಿದೆ.

ವಿಶೇಷವಾಗಿ ನಿರ್ಜಲೀಕರಣವು ಮಹಿಳೆಯರ ಚಿತ್ತ, ಸಾಮರ್ಥ್ಯದ ಮಟ್ಟ ಮತ್ತು ಸ್ಪಷ್ಟವಾಗಿ ಚಿಂತಿಸುವ ಸಾಮರ್ಥ್ಯಗಳನ್ನು ಬದಲಾಯಿಸಬಹುದು ಎಂದು ಅಧ್ಯಯನದ ವರದಿ ಹೇಳಿರುವುದಾಗಿ `ದಿ ಡೈಲಿ ಮೇಲ್` ವರದಿ ಮಾಡಿದೆ.

`ದೇಹದಲ್ಲಿರುವ ನೀರಿನ ಪ್ರಮಾಣದಲ್ಲಿ ಶೇ 1.5ರಷ್ಟು ನಷ್ಟವಾದರೂ ಅದು ನಮ್ಮ ಮನಸ್ಸಿನ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಮುಖ್ಯವಾಗಿ ಕಡಿಮೆ ಮಟ್ಟದ ನಿರ್ಜಲೀಕರಣವು ಮಹಿಳೆಯರ ಮೇಲೆ ಹೆಚ್ಚಾಗಿ ವ್ಯತಿರಿಕ್ತ ಪರಿಣಾಮಬೀರುತ್ತದೆ` ಎಂದು ಅಧ್ಯಯನಕಾರರ ತಂಡದ ಸದಸ್ಯರಾಗಿರುವ ಹ್ಯಾರಿಸ್ ಲಿಬರ್‌ಮನ್ ಹೇಳಿದ್ದಾರೆ.

ಅಲ್ಪ ಪ್ರಮಾಣದ ನಿರ್ಜಲೀಕರಣ ಯುವತಿಯರಲ್ಲಿ ತಲೆನೋವು, ಏಕಾಗ್ರತೆ ಕೊರತೆ, ಬಳಲಿಕೆಯನ್ನು ತಂದರೆ, ಯುವಕರಲ್ಲಿ ನೆನಪಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಒತ್ತಡ, ಆಯಾಸ, ತಳವಳವನ್ನು ಉಂಟು ಮಾಡುತ್ತವೆ ಎಂದು ಅಧ್ಯಯನ ವಿವರಿಸಿದೆ.

ಕೃಪೆ : ಪ್ರಜಾವಾಣಿ
 

No comments:

Post a Comment